ಶರಣು ಬಂದೆನು ನಾನು
ಶರಣು ಬಂದೆನು ನಾನು ನಿನ್ನ ಚರಣಕೆ ದೇವ
ಅನ್ಯರನು ನಾ ಕಾಣೆ ಕಷ್ಟಗಳ ಪರಿಹರಿಸೋ /ಪಲ್ಲವಿ
ನಾನು ನನ್ನದು ಎಂಬ ಸ್ವಾರ್ಥದಿಂದಲಿ ನಡೆದು
ನಿನ್ನ ಸ್ಮರಣೆಯನೂ ಮರೆತಿದ್ದೆನಯ್ಯ
ಎಲ್ಲ ಅರಿತಿಹೆನೆಂಬ ಅಹಂಕಾರದಲಿ ಮೆರೆದು
ಏನನೂ ಅರಿಯದಿಹ ಮೂಢಳಾದೆ ದೇವಾ/1/
ಪತಿಸುತರು ಎನ್ನವರು ಹಿತವನ್ನೆ ಕೋರುವರು
ಒಡಹುಟ್ಟಿದವರಿವರು ಎನ್ನ ಬಾಂಧವರು
ಎಂದೆಲ್ಲ ಗಳಹುತಲಿ ಮೆರೆದಿದ್ದೆ ನಾನು
ದಿಟವಾಗಿ ಎನ್ನೊಡೆಯ ನಿನ್ನ ಮರೆತೇನಯ್ಯ/2/
ಮೂಢತನವದು ನನ್ನ ಮುಸುಕಿರಲು ಹೇ ದೇವಾ
ನಿನ್ನ ಮಹಿಮೆಯ ನಾನು ಅರಿಯಲಾರದೆ ಹೋದೆ
ಅಂದು ಆ ರಜಕನಿಗೆ ತಿಳಿವ ನೀಡಿದ ತೆರದಿ
ಬಂದು ನೀ ನನ್ನನ್ನು ಉದ್ಧರಿಸು ಗುರುವೇ/3/
ಅನಸೂಯೆಗೊಲಿದ ತ್ರಿಮೂರ್ತಿಯೂ ನೀನೆ
ಶ್ರೀಪಾದನಾಗಿ ಮೆರೆದ ದತ್ತಮೂರ್ತಿಯು ನೀನೆ
ನೀನೆ ಸಕಲರ ರಕ್ಷ ವಿಶ್ವದೊಡೆಯ ನೀನೆ
ಗಾಣಗಾಪುರದರಸ ದತ್ತಗುರುವೇ /4/
ಸತ್ಯವತಿ ಮೂರ್ತಿ
ಶ್ರೀಮತಿ ದೀಪಿಕಾ ಗೋಪಾಲ ಕೃಷ್ಣ ರಾಗ ಸಂಯೋಜಿಸಿ ಹಾಡಿರುತ್ತಾರೆ. ಪಕ್ಕವಾದ್ಯದಲ್ಲಿ ಕಟ್ಟೆಪುರ ಆರ್ ಸತ್ಯಪ್ರಕಾಶ ಅವರು ವಯೋಲಿನ್ ನುಡಿಸಿದ್ದಾರೆ. ಸಾಯಿ ಲಕ್ಷ್ಮಿ ಕೇಶವ ಅವರು ಮೃದಂಗವನ್ನು ನುಡಿಸಿರುತ್ತಾರೆ.
ರಚನೆ: ಡಾ ಸತ್ಯವತಿ ಮೂರ್ತಿ ಗಾಯಕಿ: ದೀಪಿಕ ಗೋಪಾಲಕೃಷ್ಣ ವಯೋಲಿನ್: ಕಟ್ಟೆಪುರ ಆರ್ ಸತ್ಯಪ್ರಕಾಶ್ ಮೃದಂಗ: ಸಾಯಿ ಶಿವ್ ಲಕ್ಷ್ಮಿಕೇಶವ್
ರಚನೆ; ಡಾ. ಸತ್ಯವತಿ ಮೂರ್ತಿ
ರಾಗ: ಹಂಸಧ್ವನಿ
ತಾಳ : ಮಿಶ್ರಛಾಪು
Comments
Post a Comment